ಶಾಲೆಯ ಮೆಟ್ಟಿಲು ತುಳಿಯದ ವ್ಯಕ್ತಿಯೊಬ್ಬರು ಸ್ವಯಂಸ್ಫೂರ್ತಿಯಿಂದ ಅಕ್ಷರ ಕಲಿತು ಕೃಷಿ ಕ್ಷೇತ್ರದಲ್ಲಿ ಅಬ್ಬಾ ಎನಿಸುವಂತೆ ಸಾಧನೆ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಾಲೆಯ ಮೆಟ್ಟಿಲು ತುಳಿಯದ ವ್ಯಕ್ತಿಯೊಬ್ಬರು ಸ್ವಯಂಸ್ಫೂರ್ತಿಯಿಂದ ಅಕ್ಷರ ಕಲಿತು ಕೃಷಿ ಕ್ಷೇತ್ರದಲ್ಲಿ ಅಬ್ಬಾ ಎನಿಸುವಂತೆ ಸಾಧನೆ ಮಾಡಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಮುತ್ತಣ್ಣ ಪೂಜಾರ ಇಂಥದ್ದೊಂದು ಸಾಧನೆ ಮಾಡಿದ ಕೃಷಿಕ. ಇವರ ಸಾಧನೆಯ ಹಾದಿ ಬಲುರೋಚಕ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಿಲೆಹಾಳ ಗ್ರಾಮದವರು. ಕುರಿ ಮೇಯಿಸುವುದು ಕುಲಕಸುಬಾಗಿತ್ತು. ಅಲೆಮಾರಿಯಂತೆ ಊರಿಂದೂರಿಗೆ ಕುರಿಗಳ ಮೇಯಿಸುತ್ತಾ ಸಂಚಾರ ಮಾಡುತ್ತಿದ್ದರು. ಹಾನಗಲ್ಲ ತಾಲೂಕಿನ ಕಾಮನಹಳ್ಳಿಯಲ್ಲಿ ನೆಲೆಯೂರಿ ಅಲ್ಲಿಯೇ ಜಮೀನು ಖರೀದಿಸಿ ಬೆರಗುಗೊಳಿಸುವಂಥ ಸಾಧನೆ ಮಾಡಿದರು.
*****
ಸಾಧನೆಯ ಹಿನ್ನೆಲೆ
1999ರ ಸುಮಾರಿಗೆ ಇವರ ಬಳಿ ಎರಡೂವರೆ ಸಾವಿರ ಕುರಿಗಳು ಇದ್ದವು. ಆಗ ಇದ್ದಕ್ಕಿದ್ದಂತೆ ಕುರಿಗಳಿಗೆ ರೋಗ ತಗುಲಿ ಒಂದರ ನಂತರ ಒಂದು ಕುರಿಗಳು ಸಾಯತೊಡಗಿದವು. ಇವರಿಗೆ ದಿಕ್ಕು ತೋಚದಂತಾಯಿತು. ಆಗ ವಿಪರೀತ ನಷ್ಟ ಅನುಭವಿಸಿದರು. ಕಷ್ಟಪಟ್ಟು ಬೆಳೆಸಿದ ಕುರಿಗಳು ಕಣ್ಣೆದುರೇ ಸಾಯುವುದನ್ನು ಕಂಡು ಮರುಗಿದರು. ಕುರಿ ಮೇಯಿಸುವುದನ್ನು ಬಿಟ್ಟು ಬೆಂಗಳೂರು ಸೇರಿ ಯಾವುದಾದರೊಂದು ಫ್ಯಾಕ್ಟರಿಯಲ್ಲಿ ಉದ್ಯೋಗ ಸೇರಬೇಕೆಂದು ಬಯಸಿದ್ದರು. ಆದರೆ ಇವರ ನಿರ್ಧಾರ ತಂದೆ- ತಾಯಿಗಳಿಗೆ ಇಷ್ಟವಿರಲಿಲ್ಲ. ಮಗನಿಗೊಂದಿಷ್ಟು ಜಮೀನು ಖರೀದಿಸಿದರೆ ಕೃಷಿ ಮಾಡಬಹುದು ಅಂದುಕೊಂಡರು. ಇದಕ್ಕಾಗಿ ಹಾನಗಲ್ಲ ತಾಲೂಕಿನ ಕಾಮನಹಳ್ಳಿಯಲ್ಲಿ 1999ರ ಸುಮಾರಿಗೆ 15 ಎಕರೆ ಜಮೀನು ಖರೀದಿಸಿದರು. ಆದರೆ ಜಮೀನು ಫಲವತ್ತಾಗಿರಲಿಲ್ಲ.
ತಗ್ಗು ದಿನ್ನೆಗಳಿಂದ ಕೂಡಿದ ಬರಡು ಭೂಮಿಯಾಗಿತ್ತು. ಮುತ್ತಣ್ಣ ಅವರ ಎದುರು ಭೂಮಿಯನ್ನು ಸಮತಟ್ಟು ಮಾಡುವ ಸವಾಲಿತ್ತು. ಅದನ್ನು ಶ್ರದ್ಧೆಯಿಂದ ಸಮತಟ್ಟು ಮಾಡಿದರು. ಆರಂಭದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದರು. ವಿಪರೀತ ರಾಸಾಯನಿಕ ಗೊಬ್ಬರ ಹಾಕಿದರು. ಸಕಾಲಕ್ಕೆ ಮಳೆ ಆಗದ್ದರಿಂದ ಬೆಳೆ ಒಣಗಿ ಹೋಯಿತು. ಇದು ಆರಂಭದಲ್ಲೇ ಹೊಡೆತ ನೀಡಿತು. ರಾಸಾಯನಿಕದ ಸಹವಾಸವೇ ಬೇಡ ಎಂದು ನಿರ್ಧರಿಸಿದರು. ಸಾವಯವ ಕೃಷಿ ಮಾಡಿದರೆ ವಿಷಮುಕ್ತ ಆಹಾರ ಪಡೆಯಬಹುದು ಎಂದು ಆಲೋಚಿಸಿದರು. ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಹೆಚ್ಚು ಲಾಭ ಪಡೆಯಬಹುದೆಂದು ಲೆಕ್ಕ ಹಾಕಿದರು. ಅದಕ್ಕಾಗಿ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಮುತ್ತಣ್ಣ ಅವರಿಗೆ ಅಧಿಕಾರಿಗಳು ಸಾಥ್ ನೀಡಿದರು. ಮೊದಲು ಮಾವು ಬೆಳೆಯಲು ಮನಸ್ಸು ಮಾಡಿದರು. ಅದಕ್ಕಾಗಿ ತಾವೇ ಸಸಿಗಳನ್ನು ಬೆಳೆಸಿದರು. ಸುಮಾರು 8 ಸಾವಿರ ಸಸಿಗಳನ್ನು ಪೋಷಿಸಿದರು. ಆದರೆ ಬೇಕಾಗಿದ್ದು 800 ಸಸಿಗಳು. ಉಳಿದವುಗಳನ್ನು ಮಾರಾಟ ಮಾಡಿದರು. ಅದರಿಂದಲೇ ಸುಮಾರು 4.5 ಲಕ್ಷ ರು. ಸಂಪಾದಿಸಿದರು.
37 ಎಕರೆ ಜಮೀನು: ಆ ಹಣದಲ್ಲಿಯೇ ಬೋರ್ವೆಲ್ ಕೊರೆಸಿದರು. ಮತ್ತಷ್ಟು ಜಮೀನು ಖರೀದಿಸಿದರು. ಈಗ ಅವರ ಹೆಸರಿನಲ್ಲಿ 37 ಎಕರೆ ಜಮೀನಿದೆ. ಅದರಲ್ಲಿ 7 ಎಕರೆಯಲ್ಲಿ ನಾನಾ ದೇಸೀಯ ತಳೀಯ ಭತ್ತಗಳನ್ನು ಬೆಳೆಯುತ್ತಿದ್ದಾರೆ. ಜತೆಗೆ 18 ಎಕರೆ ಅಡಕೆ, 7 ಎಕರೆ ಮಾವು ಹಾಕಿದ್ದಾರೆ. 2.5 ಸಾವಿರ ಸಾಗವಾನಿ ಗಿಡಗಳನ್ನು ನೆಟ್ಟಿದ್ದಾರೆ. 350 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. 10 ಎಕರೆಯಲ್ಲಿ ನರ್ಸರಿ ಮಾಡಿ ನಾನಾ ಬಗೆಯ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಗ್ರೀನ್ ಹೌಸ್ ಸ್ಥಾಪಿಸಿ ಅದರಲ್ಲೂ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಇವನ್ನೆಲ್ಲ ಸಂಪೂರ್ಣವಾಗಿ ಸಾವಯವ ವಿಧಾನದಲ್ಲೇ ಬೆಳೆಯುತ್ತಿದ್ದಾರೆ. ಎರೆಹುಳು ಗೊಬ್ಬರ ಮತ್ತು ಜೀವಾಮೃತವನ್ನು ತಾವೇ ತಯಾರಿಸುತ್ತಾರೆ. ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ನೀಡುತ್ತಾರೆ. ಇತ್ತೀಚೆಗೆ ಬಯೋ ಗೊಬ್ಬರ ಘಟಕವನ್ನು ಸ್ಥಾಪಿಸಿದ್ದಾರೆ. ಜಮೀನಿನ ಕಸ ಕಡ್ಡಿ, ಸಗಣಿ, ಜಾನುವಾರುಗಳ ಮೂತ್ರವನ್ನು ಇದಕ್ಕೆ ಹಾಕಿ ದ್ರವ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ. ಜಮೀನಿನಲ್ಲಿ ನಿತ್ಯ ಏಳೆಂಟು ಜನ ಕೆಲಸ ಮಾಡುತ್ತಾರೆ. ಇವರ ಕೃಷಿ ಕೈಂಕರ್ಯ ನೋಡಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಬೆರಗುಗೊಂಡಿದ್ದಾರೆ. ಕೃಷಿಯಿಂದ ಲಾಭ ಇಲ್ಲ ಅನ್ನೋರಿಗೆ ಮುತ್ತಣ್ಣ ಅವರು ಸಾಧನೆಯ ಮೂಲಕ ಉತ್ತರ ಕೊಟ್ಟಿದ್ದಾರೆ.
ಅಕ್ಷರ ಕಲಿತರು: ಮುತ್ತಣ್ಣ ಅವರು ಶಾಲೆಯ ಮೆಟ್ಟಿಲು ತುಳಿದವರಲ್ಲ. ಆದರೂ ನಿರಕ್ಷರಿಯಲ್ಲ. ಕುರಿ ಮೇಯಿಸಲು ಹೋಗುತ್ತಿದ್ದಾಗ ಅಕ್ಷರ ಕಲಿತ ಹುಡುಗರು ಬರುತ್ತಿದ್ದರು. ಅವರಿಂದ ಉತ್ತೇಜನಗೊಂಡು ಅಕ್ಷರ ಕಲಿಯಲು ಮುಂದಾದರು. ಅದಕ್ಕಾಗಿ ಕುರಿ ಮೇಯಿಸಲು ಹೋಗುವಾಗ ಅಂಕಲಿಪಿ, ಸ್ಲೇಟು, ಪೆನ್ಸಿಲ್ಗಳನ್ನು ಒಯ್ಯುತ್ತಿದ್ದರು. ಕುರಿ ಮೇಯಿಸುವಾಗ ಅಕ್ಷರ ಕಲಿಕೆ ಆರಂಭಿಸಿದರು. ಕನ್ನಡ ಮತ್ತು ಇಂಗ್ಲಿಷ್ ಓದಲು ಮತ್ತು ಬರೆಯಲು ಬರುವಷ್ಟು ಕಲಿತರು. ಹೀಗಾಗಿ ಶಾಲೆಗೆ ಹೋಗದಿದ್ದರೂ ಮುತ್ತಣ್ಣ ಅವರು ಸ್ವಪ್ರಯತ್ನದಿಂದ ಅಕ್ಷರಸ್ಥರಾದರು.
ಹಲವು ಪ್ರಶಸ್ತಿಗಳ ಗರಿ: ಮುತ್ತಣ್ಣ ಅವರ ಸಾಧನೆಗೆ ಹತ್ತಾರು ಪ್ರಶಸ್ತಿ- ಪುರಸ್ಕಾರಗಳು ಮುಡಿಗೇರಿವೆ. ಮುಖ್ಯವಾಗಿ 2015ರಲ್ಲಿ ಕೃಷಿ ಇಲಾಖೆಯಿಂದ ಕೃಷಿ ಪಂಡಿತ, ರಾಜ್ಯೋತ್ಸವ ಪ್ರಶಸ್ತಿ ಇವರ ಸಾಧನೆ ಅರಸಿ ಬಂದಿವೆ. ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದವರು ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ನೀಡಿ ಪುರಸ್ಕರಿಸಿದ್ದಾರೆ.
ಛಲದಂಕ ಮಲ್ಲ: ಮುತ್ತಣ್ಣ ಪೂಜಾರ (9448759646) ಸಾಧನೆಗೆ ಕಾರಣ ಅವರೇ ಹೇಳುವಂತೆ, ನಾನು ಏನು ಆಗಬೇಕು ಅಂದುಕೊಳ್ಳುತ್ತೇನೆಯೋ ಅದನ್ನು ಮಾಡಿಯೇ ತೀರುತ್ತೇನೆ. ಅದಕ್ಕಾಗಿ ಕೃಷಿ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.